ಗೋಚರತೆ ಸಮಸ್ಯೆಯಿಂದಾಗಿ ಭಾರಿ ವಿಳಂಬವಾಗುವ ಅಥವಾ ರದ್ದಾಗುವ ವಿಮಾನಗಳ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ ಎಂದು ವಿಮಾನ ಯಾನ ಸಂಸ್ಥೆಗಳನ್ನು ಒತ್ತಾಯಿಸಿದ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು, ಮೂರು ಗಂಟೆಗಿಂತ ಹೆಚ್ಚು ತಡವಾಗುವ ವಿಮಾನಗಳನ್ನು ರದ್ದುಗೊಳಿಸಿ ಎಂದು ಬುಧವಾರ ತಾಕೀತು ಮಾಡಿದ್ದಾರೆ. ಅಲ್ಲದೆ, ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕ ಕೇಂದ್ರಿತ ಧೋರಣೆ ಹಾಗೂ ಪ್ರಯಾಣಿಕರ ಸುರಕ್ಷತೆಯತ್ತ ಗಮನ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದಿಂದಾಗಿ ಉಂಟಾಗಿರುವ ಕಳಪೆ ಗೋಚರತೆ ಪ್ರಮಾಣದಿಂದ ಸೋಮವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿನ ವಿಮಾನ ಕಾರ್ಯಾಚರಣೆ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳಪೆ ಗೋಚರತೆ ಪರಿಸ್ಥಿತಿಯಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಿಂದ 14 ವಿಮಾನಗಳ ಮಾರ್ಗವನ್ನು ಬದಲಿಸಲಾಗಿತ್ತು ಹಾಗೂ ಹಲವು ವಿಮಾನಗಳು ವಿಳಂಬಗೊಂಡಿದ್ದವು.